ಅರ್ಜುನನು ಹಿಂದೆ ಶ್ರೀಕೃಷ್ಣನು ಜ್ಞಾನಿಯಾಗು, ಸ್ಥಿತಪ್ರಜ್ಞನಾಗು ಎಂದೆಲ್ಲಾ ಹೇಳಿ, ಈಗ ಯುದ್ದ ಮಾಡು ಕರ್ಮ ಮಾಡು ಅಂತ ಹೇಳಿದ್ದನ್ನು ಕೇಳಿ ಈಗ ನಾನು ಏನು ಮಾಡಬೇಕೆಂಬುದನ್ನು ನಿಶ್ಚಯಮಾಡಿ ಹೇಳು ಎಂದು ಹೇಳುತ್ತಾನೆ. ಆಗ ಶ್ರೀಕೃಷ್ಣನು ಕರ್ಮದ ಬಗ್ಗೆ ವಿಸ್ತಾರವಾಗಿ ಹೇಳುತ್ತಾನೆ.
ಶ್ರೀಕೃಷ್ಣನು ಲೋಕದಲ್ಲಿ ಎರಡು ಬಗೆಯ ಜನರು ಸಿದ್ದಿಯನ್ನು ಪಡೆಯಲು ಇಚ್ಛಿಸುತ್ತಾರೆ. ಒಂದು ಬಗೆಯವರು ಜ್ಞಾನಿಗಳು ಮತ್ತೊಂದು ಬಗೆಯವರು ಕರ್ಮಿಗಳು ಎಂದು. ಈ ಜ್ಞಾನಮಾರ್ಗ ಹಾಗೂ ಕರ್ಮ ಮಾರ್ಗ ಒಂದಕ್ಕೊಂದು ವಿರೋಧವಲ್ಲ, ಪರಸ್ಪರ ಸಹಕಾರಿಗಳು. ಮೊದಲು ಜ್ಞಾನವನ್ನು ಪಡೆಯಲು ಕರ್ಮ ಮಾಡಬೇಕಾಗುತ್ತದೆ ಅನಂತರ ಜ್ಞಾನ ಬಂದಮೇಲೆ ಮಾಡಿದ್ದೆಲ್ಲಾ ಕರ್ಮವಾಗುತ್ತದೆ ! ಇಲ್ಲಿ ಕರ್ಮ ಎಂದರೆ ನಿರ್ಲೇಪ ಕರ್ಮ ಎಂದು ಧಾರಾಳವಾಗಿ ಅರ್ಥೈಸಿಕೊಳ್ಳಬಹುದು. ಜೀವ ಜಂತುವು ಒಂದು ಕ್ಷಣ ಕೂಡ ಕರ್ಮ ಮಾಡದೇ ಇರುವುದಕ್ಕಾಗುವುದಿಲ್ಲ ನಾವು ಪ್ರಜ್ಞಾಪೂರ್ವಕವಾಗಿ ಅಲ್ಲದಿದ್ದರೂ ಪ್ರಕೃತಿಯೇ ನಮ್ಮಿಂದ ಕರ್ಮಗಳನ್ನು ಮಾಡಿಸಿಕೊಳ್ಳುತ್ತದೆ ಅಜ್ಞಾನಿಗಳು ಮಾತ್ರ ಅಹಂ ಭಾವದಿಂದ ನಾನೇ ಕರ್ಮ ಮಾಡುತ್ತಿದ್ದೀನಿ ಎಂಬ ಭ್ರಮೆಗೆ ಒಳಪಟ್ಟಿರುತ್ತಾರೆ. ಯಾರು ಬರೀ ಇಂದ್ರಿಯಗಳನ್ನು ನಿಗ್ರಹಿಸಿ ಮನಸ್ಸಿನ ಮಟ್ಟದಲ್ಲಿ ಕಾಮ ಕ್ರೋಧಗಳಿಂದ ಮುಕ್ತರಾಗಿರುವುದಿಲ್ಲವೋ ಅಂತಹವರು ಮಿತ್ಯಾಚಾರಿಗಳು ಎಂದು ಹೇಳುತ್ತಾನೆ. ಅಂದರೆ ನನ್ನ ವ್ಯಾಕ್ಯಾನ ಏನೆಂದರೆ, ಅದು ಕೀಳುಮಟ್ಟದ್ದು ಎಂಬ ಅರ್ಥವಲ್ಲದೇ, ಅದೇ ಪರಮಾರ್ಥ ಎಂದು ಅರ್ಥೈಸಿಕೊಳ್ಳಬಾರದು ಎಂದು. ಇದು ಪರೀಕ್ಷೆಯಲ್ಲಿ 35 ಅಂಕ ತೆಗೆದುಕೊಂಡಂತೆ, ಇದು ತಪ್ಪೇನೂ ಅಲ್ಲ ಆದರೆ ಇದೇ ಪುರುಷಾರ್ಥವಲ್ಲ. ಇನ್ನೂ ಉಳಿದ 65 ಅಂಕ ಮನಸ್ಸಿಗೆ ಸಂಭಂಧ ಪಟ್ಟಿದ್ದು. ಹಾಗಾಗಿ ಕೇವಲ ಹೊರಗಿನ ಇಂದ್ರಿಯ ನಿಗ್ರಹದಿಂದ ಏನೂ ಉಪಯೋಗವಿಲ್ಲ. ಮನಸ್ಸಿನ ನಿಯಂತ್ರಣ ಮುಖ್ಯ ಎಂದು ಭಗವಂತನ ಅಭಿಪ್ರಾಯವಿರಬಹುದು ಎಂಬುದು ನನ್ನ ಅಭಿಪ್ರಾಯ !
ಇಲ್ಲಿ ಇನ್ನೊಂದು ಮುಖ್ಯವಾದ ಅಂಶ ಹೇಳುತ್ತಾನೆ. ಅದೇನೆಂದರೆ, ಯಜ್ನಾರ್ಥವಾಗಿ ಕರ್ಮ ಮಾಡಬೇಕು ಇಲ್ಲದಿದ್ದರೆ ಅಂತಹ ಕರ್ಮವೂ ಇಹ ಭಂಧನವನ್ನು ಸೃಷ್ಟಿ ಮಾಡುತ್ತದೆ. ಹಾಗಾಗಿ ನೀನು ಮುಕ್ತಸಂಘನಾಗಿ ಕರ್ಮವನ್ನು ಮಾಡು (ನಿರ್ಲೇಪ ಕರ್ಮ) ಎಂದು. ಇಲ್ಲಿ ಯಜ್ಞ ಎಂಬ ಪದವು ಈ ಅಧ್ಯಾಯದಲ್ಲಿ ಅನೇಕಬಾರಿ ಬರುತ್ತದೆ. ಯಜ್ಞ ಎಂದರೆ ಹಂಚಿಕೊಂಡು ಬಾಳುವುದು ಎಂದು ಅರ್ಥೈಸಬೇಕು. ನಮ್ಮ ಸನಾತನ ಧರ್ಮದ ಸಾರವೇ ಯಜ್ಞ, ದಾನ, ತಪಸ್ಸುಗಳು ಹಾಗಾಗಿ ನಾವು ಹಂಚಿಕೊಂಡು ಬಾಳಬೇಕು ಎಂಬುದು ಬಹಳ ಬಹಳ ಬಾರಿ ಕೇಳುತ್ತೇವೆ. ಈ ಶ್ಲೊಕದ ಉದ್ದೇಶವೂ ಅದೇ, ನಾವು ಇತರರೊಂದಿಗೆ ಹಂಚಿಕೊಂಡು ಬದುಕಬೇಕು ಎನ್ನುವುದು.
ಹೀಗೆ ಹಂಚಿಕೊಂಡು ಬದುಕುವ ಬುದ್ದಿಯೂ ದೇವರು ನಮಗೆ ಹುಟ್ಟುವಾಗಲೇ ನೀಡಿದ್ದಾನೆ ಆದರೂ ಅದು ಧೂಮದಿಂದ ಕೂಡಿದ ಬೆಂಕಿಯ ತರಹ ಎದುರಿಗೆ ಕಾಣದಾಗಿದೆ. ಅದನ್ನು ನಾವು ಕಂಡುಕೊಳ್ಳಬೇಕು. ಹೀಗೆ ಇನ್ನೊಬ್ಬರ ಜೊತೆಗೆ ಹಂಚಿಕೊಳ್ಳದೇ ತಾನೊಬ್ಬನೇ ಅನುಭವಿಸುವನು ಕಳ್ಳ ಎಂದು ಭಗವಂತನು ಹೇಳುತ್ತಾನೆ. ಹೀಗೆ ಯಾರು ಹಂಚಿಕೊಂಡು ಬದುಕುತ್ತಾರೋ ಅವರು ಪಾಪಗಳಿಂದ ಮುಕ್ತರಾಗುತ್ತಾರೆ ಹಾಗೂ ಯಾರು ತಮ್ಮ ಸ್ವಾರ್ಥ ಕಾರ್ಯಗಳನ್ನು ಮಾತ್ರ ಮಾಡಿಕೊಂಡು ಇತರರೊಂದಿಗೆ ಹಂಚಿಕೊಂಡು ಹೋಗುವುದಿಲ್ಲವೋ ಅವರು ಪಾಪವನ್ನೇ ಉಣ್ಣುತ್ತಾರೆ.ಹೀಗೆ ನಾವು ಕರ್ಮಫಲದಲ್ಲಿ ಆಸಕ್ತಿ ಇಲ್ಲದೇ ಪ್ರತಿಯೊಂದು ಕಾರ್ಯವನ್ನು ಯಜ್ಞರೂಪವಾಗಿ ಮಾಡಬೇಕು ಎಂಬುದು ಭಗವಂತನ ಇಂಗಿತ.
ಕೊನೆಗೆ ಶ್ರೀಕೃಷ್ಣನು ನನ್ನಲ್ಲಿ ನಿನ್ನ ಎಲ್ಲಾ ಕಾರ್ಯಗಳನ್ನು ಅರ್ಪಿಸಿ ನಿರ್ಮಮನಾಗಿ ಅಂಟಿಲ್ಲದೇ ಹೆದರಿಕೆ ಇಲ್ಲದೇ ಯುದ್ದಮಾಡು ಇದು ನನ್ನ ನಿಶ್ಚಯವಾದ ಮತ ಎಂದು ಹೇಳುತ್ತಾನೆ. ಹಾಗೂ ನಿನ್ನ ಸ್ವಧರ್ಮಕ್ಕೆ ಅನುಸಾರವಾಗಿ ನೀನು ಕರ್ಮವನ್ನು ಮಾಡಬೇಕು ಅದು ಬಿಟ್ಟು ಪರಧರ್ಮವನ್ನು ಮಾಡುತ್ತೇನೆ ಎಂದು ಹೋಗಬಾರದು ಎಂದು ಎಚ್ಚರ ನೀಡುತ್ತಾನೆ. ಇಲ್ಲಿ ಸ್ವಧರ್ಮ ಎಂದರೇನು ಎಂದು ತಿಳಿದುಕೊಳ್ಳೋಣ, ಡಿ.ವಿ.ಜಿ. ಯವರು ಸ್ವಧರ್ಮಕ್ಕೆ ಬಹಳ ಚೆನ್ನಾಗಿ ವ್ಯಾಕ್ಯಾನ ಮಾಡಿದ್ದಾರೆ. ಮನುಷ್ಯನಿಗೆ ಯಾವಯಾವ ಗುಣಗಳು,ಯಾವಯಾವ ಶಕ್ತಿಗಳು, ಎಂತೆಂತಹ ಒಲವುಗಳು, ಎಂತೆಂಥ ಹುಮ್ಮಸ್ಸುಗಳು ಸ್ವಾಭಾವಿಕವಾಗಿ ಬಂದಿರುತ್ತವೋ ಆ ಗುಣ ಶಕ್ತಿಗಳನ್ನೂ ಆ ಮನಃಪ್ರವಣತೆ , ಆ ಅಂತಃಪ್ರವೃತ್ತಿಯನ್ನೂ ಅವನು ಲೋಕಪ್ರಯೋಜನಕ್ಕಾಗಿ ವಿನಿಯೋಗಿಸಿವುದೆ ಸ್ವಧರ್ಮ. ಹೀಗೆ ನಾವು ನಮ್ಮ ನಮ್ಮ ಸ್ವಧರ್ಮವನ್ನು ಮಾಡಬೇಕು ಆಗ ಲೋಕ ಸಂಗ್ರಹ ಕಾರ್ಯ ಸುಲಭವಾಗುತ್ತದೆ ಎಂದು ಶ್ರೀಕೃಷ್ಣನ ಅಭಿಪ್ರಾಯ.
ಕೊನೆಗೆ ಅರ್ಜುನನು ಜನರು ಬಲವಂತವಾಗಿ ತಪ್ಪು ಮಾಡಲು ಕಾರಣಗಳೇನು ಎಂದು ಕೇಳುತ್ತಾನೆ. ಅದಕ್ಕೆ ಕೃಷ್ಣನು ರಜೋಗುಣದಿಂದ ಹುಟ್ಟಿರುವ ಈ ಕಾಮ ಕ್ರೋಧಗಳೇ ಇದಕ್ಕೆಲ್ಲಾ ಕಾರಣ ಅದು ಜ್ಞಾನಕ್ಕೆ ಮುಸುಕಿದ್ದಂತೆ, ಜ್ಞಾನಿಗಳ ನಿತ್ಯವೈರಿ ಹಾಗಾಗಿ ನೀನು ಇವುಗಳನ್ನು ಗೆಲ್ಲಬೇಕು, ಇಂದ್ರಿಯ ನಿಗ್ರಹ ಮಾಡು ಶತೃಗಳನ್ನು ಜಯಿಸು ಎಂದು ಹೇಳುತ್ತಾನೆ.
ಈಗ ನಾವು ಈ ಅಧ್ಯಾಯದ ಸಾರಾಂಶವನ್ನು ನೋಡೋಣ. ಮೊದಲಿಗೆ ನಾವು ಏನೇ ಮಾಡಬೇಕಾದರೂ ಯಜ್ಞರೂಪವಾಗಿ ಮಾಡಬೇಕು ಅಂದರೆ ನಾವು ಮಾಡುತ್ತಿರುವ ಕಾರ್ಯವು 4 ಜನರಿಗೆ ಸಹಾಯವಾಗಬೇಕು, ಹೀಗೆ ಸ್ವಧರ್ಮಕ್ಕೆ ತಕ್ಕ ಕರ್ಮವನ್ನು ನಿರ್ಲೇಪವಾಗಿ ಮಾಡಬೇಕು. ಇನ್ನೂ ಹೆಚ್ಚಿನ interesting ವಿಷಯಗಳು ನಿಮಗೇನಾದರೂ ಸಿಕ್ಕಲ್ಲಿ ದಯವಿಟ್ಟು ಹಂಚಿಕೊಳ್ಳಿ. ಯಜ್ಞಭಾಗಿಗಳಾಗಿ ! :P